Parameshwar Gundkal: ಕಲರ್ಸ್ ಚಾನೆಲ್ ಬಿಟ್ಟಿದ್ದೇಕೆ ಪರಮೇಶ್ವರ್ ಗುಂಡ್ಕಲ್, ಇಲ್ಲಿದೆ ಸತ್ಯ
ನಮ್ನ ಕನ್ನಡ ಕಿರುತೆರೆ ಲೋಕದ (Kannada Television) ಜನಪ್ರಿಯ ವಾಹಿನಿ ಕಲರ್ಸ್ ಕನ್ನಡದ (Colors Kannada) ಮುಖ್ಯಸ್ಥರಾಗಿದ್ದಂತಹ (Head) ಪರಮೇಶ್ವರ ಗುಂಡ್ಕಲ್ (Parameshwar Gundkal) ರವರು ಇದೀಗ ರಾಜೀನಾಮೆ ನೀಡಿದ್ದಾರೆ. ಹೌದು ಸಾಮಾಜಿಕ ಜಾಲತಾಣದಲ್ಲಿ (Social Media) ಆಕ್ಟಿವ್ ಅಗಿರುವ ಪರಮ್ ರವರು ಭಾವುಕ ಪೋಸ್ಟ್ (Post) ಬರೆದುಕೊಂಡಿದ್ದಾರೆ. ಇನ್ನು ಕಿರುತೆರೆ ಪ್ರಿಯರು ಮನರಂಜನೆ (Entertainment) ನೀಡುವಲ್ಲಿ ಕಲರ್ಸ್ ಕನ್ನಡ ಸದಾ ಮುಂದಿದೆ. ಪ್ರತಿನಿತ್ಯ ಧಾರಾವಾಹಿ (Serial) ಮೂಲಕ ರಂಜಿಸಿದರೆ ವಾರಾಂತ್ಯದಲ್ಲಿ ರಿಯಾಲಿಟಿ ಶೋಗಳ (Reality Show) ಮುಖಾಂತರವಾಗಿ ಮನರಂಜನೆ ನೀಡುತ್ತಿದೆ. ಇನ್ನು ವಾಹಿನಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಲು ಕಾರಣ ಚಾನೆಲ್ ಬ್ಯುಸಿನೆಸ್ ಹೆಡ್ ಆಗಿದ್ದ ಪರಮೇಶ್ವರ್ ಗುಂಡ್ಕಲ್ ಎನ್ನಬಹುದು.
Parameshwar Gundkal ಪೋಸ್ಟ್ ನಲ್ಲಿ ಏನಿದೆ?
ನಮ್ಮ ಕಡೆ ಮನೆಗಳಿಗೆ ಹೊಸದಾಗಿ ಒಂದೊಂದೇ ಟೆಲಿವಿಷನ್ ಬರುತ್ತಿರುವಾಗ ನಮ್ಮನೆಗೆ ಕರೆಂಟೂ ಬಂದಿರಲಿಲ್ಲ. ಮೊದಲನೇ ಸಲ ಕರೆಂಟ್ ಬಂದ ಒಂದು ಮಳೆಗಾಲದ ಸಂಜೆ ಅಕ್ಕನ ಜೊತೆ ಸೇರಿ ಬರೀ ಸ್ವಿಚ್ ಒತ್ತಿ ಲೈಟ್ ಆನ್ ಮಾಡುವುದು ಮತ್ತು ಆಫ್ ಮಾಡುವುದನ್ನೇ ಮಾಡುತ್ತಾ ಗಂಟೆಗಟ್ಟಲೇ ಕುಣಿದಾಡಿದ್ದು ನಿನ್ನೆ ಮೊನ್ನೆ ಆದ ಹಾಗೆ ನೆನಪಿದೆ. ಕಾರಣವಿಲ್ಲದೇ ಲೈಟ್ ಆನ್ ಮತ್ತು ಆಫ್ ಮಾಡುವುದೇ ನಮಗೆ ಸುಮಾರು ದಿನಗಳ ಕಾಲ ಎಂಟರಟೇನ್ಮೆಂಟ್ ಆಗಿತ್ತು.ಇನ್ನು ಈ ಟಿವಿಯಂತ ಎಂಟರ್ ಟೇನ್ಮೆಂಟ್ ವಾಹಿನಿಗಳು ಕನ್ನಡದಲ್ಲಿ ಕತೆಗಳನ್ನು ಹೇಳತೊಡಗಿದಾಗ ನಮ್ಮನೆಗೆ ಕಲರ್ ಟಿವಿ ಬಿಡಿ ಇನ್ನೂ ಟೀವಿಯೇ ಬಂದಿರಲಿಲ್ಲ. ಗದ್ದೆ ತೋಟಗಳಲ್ಲಿ ಕೆಲಸ ಮಾಡುತ್ತಾ ದನ ಕರು ಮೇಯಿಸುತ್ತಾ ಅಲೆದಾಡುತ್ತಿರುವಾಗ ನಾಲ್ಕು ಬ್ಯಾಂಡಿನ ರೇಡಿಯೋದಲ್ಲಿ ಧ್ವನಿ ಕೇಳಿಸಿಕೊಳ್ಳುತ್ತಾ ಕಲರ್ ಕಲರ್ ಚಿತ್ರಗಳನ್ನು ಕಣ್ಮುಂದೆ ತಂದುಕೊಳ್ಳುತ್ತಾ ಯಾವತ್ತಾದರೂ ಒಂದು ದಿನ ಕತೆ ಹೇಳಬೇಕೆಂದು ಕಾತರಿಸುತ್ತಿದ್ದ ಟೈಮ್ ಅದು.
ಆ ಅವಕಾಶ ಮೊದಲು ಸಿಕ್ಕಿದ್ದು ಕನ್ನಡ ಪತ್ರಿಕೆಗಳಲ್ಲಿ. ನಂತರ ಸಿಕ್ಕಿದ್ದು ಟಿವಿಯಲ್ಲಿ. ಟೆಲಿವಿಷನ್ ಸೇರಿಕೊಂಡ ಮೊದ ಮೊದಲು ತುಂಬಾ ಬೆರಗು ಹುಟ್ಟಿಸಿದ್ದ ಕಂಪನಿ ವಯಾಕಾಮ್18. ಸರಿಯಾದ ಟೈಮಲ್ಲಿ ಸರಿಯಾದ ಜಾಗದಲ್ಲಿ ಇದ್ದಿದ್ದರಿಂದಲೋ ಏನೋ. ಒಂದು ದಿನ ಅದೇ ಕಂಪನಿಯ ಕಲರ್ಸ್ ಚಾನೆಲ್ಲನ್ನು ಕನ್ನಡದಲ್ಲಿ ರೂಪಿಸುವ ಅವಕಾಶ ಸಿಕ್ಕಿಬಿಟ್ಟದ್ದು ಮಾತ್ರ ಬಹುಶಃ ಅದೃಷ್ಟ. ಅಷ್ಟೇ ಅನಿರೀಕ್ಷಿತ.
View this post on Instagram
10 ವರುಷ ಜರ್ನಿ ನೆನದ ಗುಂಡ್ಕಲ್:
ಒಟ್ಟಾರೆ ಹತ್ತೂವರೆ ವರ್ಷ! ಅಗ್ನಿಸಾಕ್ಷಿ ಲಕ್ಷ್ಮೀ ಬಾರಮ್ಮ ರಾಧಾರಮಣ ಕನ್ನಡತಿ ಥರದ ಕತೆಗಳು ಬಿಗ್ ಬಾಸ್ ಡಾನ್ಸಿಂಗ್ ಸ್ಟಾರ್ ಸೂಪರ್ ಮಿನಿಟ್ ಕನ್ನಡದ ಕೋಟ್ಯಧಿಪತಿ ಅನುಬಂಧ ಥರದ ಒಂದಿಷ್ಟು ಶೋಗಳು. ರಿಬ್ರಾಂಡಿಂಗ್ ಎಚ್ ಡಿ ಚಾನೆಲ್ ಎರಡನೇ ಚಾನೆಲ್ ಸಿನಿಮಾ ಚಾನೆಲ್ ವೂಟ್ ಹೀಗೆ ಒಂದೊಂದೂ ಕಲರ್ ಕಲರ್ ಅನುಭವ.
ಗೆದ್ದ ಖುಷಿ ಸೋತ ನೋವು ತಪ್ಪು ಮಾಡಿ ಕಲಿತ ಪಾಠ ಅಕಾರಣವಾಗಿ ಸಿಕ್ಕಿದ ಮೆಚ್ಚುಗೆ ಸಕಾರಣವಾಗಿ ಆದ ಟೀಕೆ ಮತ್ತು ಅವಮಾನ, ಕತೆ ಹುಟ್ಟಿ ಸಂಭ್ರಮಿಸಿದ ದಿನಗಳು ಕತೆ ಹುಟ್ಟದೇ ಗೊಂದಲಗೊಂಡ ಕ್ಷಣಗಳು ದಾರಿಯಲ್ಲಿ ಸಿಕ್ಕಿದ ನಕ್ಷತ್ರಗಳು ಹೆಕ್ಕಿಕೊಂಡ ಭಾವನೆಗಳೆಲ್ಲ ಸೇರಿ ತಿರುಗಿ ನೋಡಿದಾಗ ಸಿಕ್ಕಾಪಟ್ಟೆ ಸಮಾಧಾನ. ಸಂತೃಪ್ತಿ. ಹತ್ತೂವರೆ ವರ್ಷಗಳಲ್ಲಿ ಏನೇನೋ ಆಯಿತು. ಆಗಿದ್ದೆಲ್ಲಾ ಒಳ್ಳೆಯದಕ್ಕೇ ಆಯಿತು. ತೀವ್ರವಾಗಿ ಮತ್ತು ಪ್ರಾಮಾಣಿಕವಾಗಿ ಕನಸು ಕಂಡರೆ ಸಾಕು. ಸ್ವಲ್ಪ ಮನಸ್ಸಿಟ್ಟು ಚೂರು ಪಾರು ಇಷ್ಟಪಟ್ಟು ಕೆಲಸ ಮಾಡಿದರೆ ಸಾಕು. ಯಾವ ನಕ್ಷತ್ರವಾದರೂ ಸಿಕ್ಕುತ್ತದೆ!
ಭಾವುಕರಾದ ಗುಂಡ್ಕಲ್
ಮಿಲ್ಲರ್ಸ್ ರೋಡಿನ ಐದನೇ ಫ್ಲೋರಿನ ಆಫೀಸಿನಲ್ಲಿ ಕುಡಿದ ಚಹಾ ಕಪ್ಪುಗಳ ಲೆಕ್ಕ ಗೊತ್ತಿಲ್ಲ. ಅಷ್ಟೆಲ್ಲಾ ಚಹಾ ಕುಡಿದರೂ ಇನ್ನಷ್ಟು ಕುಡಿಯುವ ಆಸೆ ಇದ್ದೇ ಇದೆ. ಸಿಕ್ಕಿದ ಒಬ್ಬಬ್ಬ ವ್ಯಕ್ತಿಯನ್ನೂ ಇನ್ನೊಂದು ಸಲ ಮಾತಾಡಿಸುವ ಮನಸ್ಸಾಗುತ್ತದೆ. ಹೇಳಿದ ಕತೆಗಳನ್ನು ಇನ್ನೊಂದು ಸಲ ಚೂರು ಸರಿಮಾಡಿಕೊಂಡು ಹೇಳಿಬಿಡೋಣ ಎಂಬ ಕನಸು ಬೀಳುತ್ತದೆ.ಇವತ್ತು ಬೆಳಿಗ್ಗೆಯಿಂದ ಟಿವಿ ಕೆಲಸ ಇಲ್ಲ ಎಂದು ಯೋಚಿಸಿ ಮನಸ್ಸು ಒದ್ದೆಯಾಗಿದೆ. ಒಳ್ಳೆದು ಮಾತ್ರ ಆಗಲಿ ಅಂತ ಹಾರೈಸಬೇಡಿ. ಒಳ್ಳೆಯದು ಕೆಟ್ಟದ್ದು ಖುಷಿ ದುಃಖ ಗೆಲುವು ಸೋಲು ಅಸೂಯೆ ಸಂಕಟ ಪ್ರೀತಿ ಆಘಾತ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕಲಿಕೆ ಹೀಗೆ ಎಲ್ಲವೂ ಆಗಲಿ ಎಂದು ಹೇಳಿ. ಜೀವನವೇ ಆಗಲಿ ಎಂದು ಹಾರೈಸಿ. ಥ್ಯಾಂಕ್ಯೂ ವಯಾಕಾಮ್18. ಥ್ಯಾಂಕ್ಯೂ ಕಲರ್ಸ್ ಕನ್ನಡ. ಹೋಗಿ ಬರುವೆ. ನಮಸ್ಕಾರ! ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
ಬೇರೆ ವಾಹಿನಿ ಸೇರುತ್ತಾರ?
ಸದ್ಯ ಇದಿಷ್ಟು ವರ್ಷಗಳ ಕಾಲ ಅವರಿಂದ ಬೆಳೆದವರು ಅವರ ಜೊತೆ ದುಡಿದವರು ಹಾಗೂ ಅವರಿಂದ ಅವಕಾಶ ಪಡೆದವರು ಈ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಪರಮೇಶ್ವರ್ ಅವರಿಗೆ ಶುಭ ಹಾರೈಸಿದ್ದಾರೆ. ಇನ್ನು ಮುಂದಿನ ಅವರ ಜರ್ನಿ ಚೆನ್ನಾಗಿರಲಿ ಎಂದು ಹಾರೈಸಿದ್ದು ಕಲರ್ಸ್ ಕನ್ನಡ ವಾಹಿನಿಯಿಂದ ಹೊರ ಹೋಗುತ್ತಿರುವ ಪರಮೇಶ್ವರ್ ಗುಂಡ್ಕಲ್ ರವರು ಬೇರೆ ಯಾವುದೇ ವಾಹಿನಿಗೆ ಸೇರುತ್ತಿಲ್ಲವಂತೆ.. ಸತತ ಹದಿನೈದು ವರ್ಷಗಳ ಕಾಲ ಕಿರುತೆರೆಯ ಟಿವಿ ಲೋಕದಲ್ಲಿಯೇ ಕೆಲಸ ಮಾಡಿರುವ ಕಾರಣದಿಂದಾಗಿ ಇದೆಲ್ಲದರಿಂದ ಅವರೇ ಸ್ವತಃ ಬ್ರೇಕ್ ಬೇಕೆಂದು ಕೆಲಸ ಬಿಟ್ಟಿದ್ದು ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ನಿರ್ಧಾರ ಮಾಡಿದ್ದಾರೆ.