Gold Loan Alert: ಬ್ಯಾಂಕ್‌ನಲ್ಲಿ ಚಿನ್ನ ಅಡವಿಡುವವರಿಗೆ ಎಚ್ಚರಿಕೆ! ಇದು ನಿಮ್ಮ ಜೊತೆಯೂ ಆಗಬಹುದು

By Chetan Yedve |

20/12/2025 - 8:02 pm |

ಸಾಮಾನ್ಯವಾಗಿ ಜನರಿಗೆ ಹಣದ ಅವಶ್ಯಕತೆ ಬಂದಾಗ ಮೊದಲು ನೆನಪಾಗುವುದು ಮನೆಯಲ್ಲಿರುವ ಚಿನ್ನ. ಖಾಸಗಿ ಲೇವಾದೇವಿಗಾರರ ಬಳಿ ಬಡ್ಡಿ ಜಾಸ್ತಿ ಮತ್ತು ಸುರಕ್ಷತೆ ಕಡಿಮೆ ಎಂಬ ಕಾರಣಕ್ಕೆ ಬಹುತೇಕರು ಸರ್ಕಾರಿ ಅಥವಾ ಪ್ರತಿಷ್ಠಿತ ಬ್ಯಾಂಕ್‌ಗಳತ್ತ ಮುಖ ಮಾಡುತ್ತಾರೆ. ಬ್ಯಾಂಕ್‌ಗಳ ಮೇಲೆ ಜನರಿಗೆ ಎಲ್ಲಿಲ್ಲದ ನಂಬಿಕೆ. ಆದರೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಘಟನೆಯೊಂದು ಈ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ.

ನೀವು ಕೂಡ ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟು (Gold Loan) ಸಾಲ ಪಡೆಯುವವರಾಗಿದ್ದರೆ ಅಥವಾ ಈಗಾಗಲೇ ಇಟ್ಟಿದ್ದರೆ, ಈ ಸುದ್ದಿಯನ್ನು ಓದಲೇಬೇಕು.

WhatsApp Group
Join Now
Telegram Group
Join Now

ಮೈಸೂರಿನಲ್ಲಿ ನಡೆದಿದ್ದೇನು?

ಮೈಸೂರಿನ ಹಿನಕಲ್ (Hinkal) ಗ್ರಾಮದ ಕೆನರಾ ಬ್ಯಾಂಕ್ (Canara Bank) ಶಾಖೆಯಲ್ಲಿ ಚಿನ್ನ ಗಿರವಿ ಇಟ್ಟಿದ್ದ ಗ್ರಾಹಕರಿಗೆ ಆತಂಕ ಎದುರಾಗಿದೆ. ಸಾಲ ತೀರಿಸಿ ತಮ್ಮ ಚಿನ್ನವನ್ನು ವಾಪಸ್ ಪಡೆಯುವಾಗ, ತಾವು ಇಟ್ಟಿದ್ದ ಒಡವೆಗೂ ಮತ್ತು ವಾಪಸ್ ಬಂದ ಒಡವೆಗೂ ವ್ಯತ್ಯಾಸ ಕಂಡುಬಂದಿದೆ ಎಂಬುದು ಗ್ರಾಹಕರ ಗಂಭೀರ ಆರೋಪವಾಗಿದೆ.

Advertisement

ಪ್ರಮುಖವಾಗಿ ಹಿನಕಲ್ ಗ್ರಾಮದ ಲಾವಣ್ಯ ಎಂಬುವರು ಈ ಬಗ್ಗೆ ದನಿ ಎತ್ತಿದ್ದಾರೆ. ಅವರು ಬ್ಯಾಂಕ್‌ನಲ್ಲಿ ಒಟ್ಟು 56 ಗ್ರಾಂ ತೂಕದ ಚಿನ್ನದ ನೆಕ್ಲೆಸ್, ದೊಡ್ಡ ಹಾರ, ಚಿಕ್ಕ ಹಾರ ಮತ್ತು ಬಳೆಗಳನ್ನು ಗಿರವಿ ಇಟ್ಟಿದ್ದರು. ಎರಡು ದಿನಗಳ ಹಿಂದೆ ಸಾಲ ತೀರಿಸಿ ಒಡವೆ ಬಿಡಿಸಿಕೊಂಡು ಹೋಗಿದ್ದರು. ಮನೆಗೆ ಹೋಗಿ ಸರವನ್ನು ಧರಿಸುವಾಗ, ಹಾರವು ಚಿಕ್ಕದಾದಂತೆ ಭಾಸವಾಗಿದೆ. ಕೂಡಲೇ ಅನುಮಾನ ಬಂದು ಪರಿಶೀಲನೆ ನಡೆಸಿದ್ದಾರೆ.

ಫೋಟೋ ಸಾಕ್ಷಿ ಇತ್ತು, ಸಿಕ್ಕಿಬಿತ್ತು ವ್ಯತ್ಯಾಸ!

ಅದೃಷ್ಟವಶಾತ್, ಲಾವಣ್ಯ ಅವರು ಚಿನ್ನ ಅಡವಿಡುವ ಮುನ್ನ ತಮ್ಮ ಒಡವೆಗಳ ಫೋಟೋ ತೆಗೆದು ಇಟ್ಟುಕೊಂಡಿದ್ದರು. ಈಗ ಒಡವೆ ಕೈಗೆ ಬಂದಾಗ ಅನುಮಾನಗೊಂಡು ಹಳೆಯ ಫೋಟೋ ಜೊತೆ ಹೋಲಿಸಿ ನೋಡಿದ್ದಾರೆ. ಆಗ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ:

  • ಮೊದಲು: ಅಡವಿಡುವಾಗ ಹಾರದಲ್ಲಿ 81 ಚಿನ್ನದ ಗುಂಡುಗಳಿದ್ದವು.
  • ಈಗ: ವಾಪಸ್ ಪಡೆದಾಗ ಎಣಿಸಿ ನೋಡಿದರೆ ಕೇವಲ 73 ಗುಂಡುಗಳಿವೆ!.

ಬ್ಯಾಂಕ್‌ನಲ್ಲಿ ಈ ಬಗ್ಗೆ ವಿಚಾರಿಸಿದಾಗ ಆರಂಭದಲ್ಲಿ ಸಿಬ್ಬಂದಿ ಸರಿಯಾದ ಉತ್ತರ ನೀಡಲಿಲ್ಲ ಮತ್ತು “ತಪ್ಪು ಸರಿಪಡಿಸುತ್ತೇವೆ” ಎಂದು ಹಾರಿಕೆ ಉತ್ತರ ನೀಡಿದ್ದಾರೆ ಎಂಬುದು ಲಾವಣ್ಯ ಅವರ ಆರೋಪವಾಗಿದೆ.

Advertisement

ನೂರಾರು ಗ್ರಾಹಕರಿಂದ ಆಕ್ರೋಶ

ವಿಷಯ ತಿಳಿಯುತ್ತಿದ್ದಂತೆ ನೂರಾರು ಗ್ರಾಹಕರು ಬ್ಯಾಂಕ್ ಮುಂದೆ ಜಮಾಯಿಸಿದ್ದು, ಲಾವಣ್ಯ ಅವರಿಗೆ ಮಾತ್ರವಲ್ಲದೇ ಬೇರೆ ಗ್ರಾಹಕರಿಗೂ ಇದೇ ರೀತಿ ಮೋಸವಾಗಿರುವ ಶಂಕೆ ವ್ಯಕ್ತವಾಗಿದೆ. ಅಲ್ಲಿ ನೆರೆದಿದ್ದ ಪ್ರತಿಯೊಬ್ಬರೂ ಬ್ಯಾಂಕ್ ಸಿಬ್ಬಂದಿ ಹಾಗೂ ಚಿನ್ನ ಪರಿಶೀಲಿಸುವ ಅಕ್ಕಸಾಲಿಗನ (Gold Appraiser) ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಮುತ್ತಿಗೆ ಹಾಕಿದ್ದಾರೆ.

ಬ್ಯಾಂಕ್ ಅಧಿಕಾರಿಗಳು ಮತ್ತು ಪೊಲೀಸರ ಪ್ರತಿಕ್ರಿಯೆ

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳಕ್ಕೆ ಬಂದ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ (Regional Manager) ರಾಜಶೇಖರ್ ಅವರು ಗ್ರಾಹಕರನ್ನು ಸಮಾಧಾನಪಡಿಸಲು ಯತ್ನಿಸಿದರು. “ಬ್ಯಾಂಕ್‌ನಲ್ಲಿ ಗ್ರಾಹಕರಿಗೆ ಮೋಸವಾಗಲು ಸಾಧ್ಯವಿಲ್ಲ, ಆದರೂ ಈ ಬಗ್ಗೆ ಆಂತರಿಕ ತನಿಖೆ ನಡೆಸುತ್ತೇವೆ. ಗ್ರಾಹಕರ ದೂರುಗಳನ್ನು ಆಧರಿಸಿ ಪರಿಶೀಲನೆ ನಡೆಸಲಾಗುವುದು. ಅಕ್ಕಸಾಲಿಗ ಅಶ್ವಿನ್ ಎಂಬುವವರ ವಿರುದ್ಧ ಸದ್ಯ ಯಾವುದೇ ಲಿಖಿತ ದೂರು ಬಂದಿಲ್ಲ, ಆದರೂ ತಪ್ಪು ನಡೆದಿದ್ದರೆ ಬ್ಯಾಂಕ್ ನಿಯಮಗಳ ಪ್ರಕಾರ ಗ್ರಾಹಕರಿಗೆ ನ್ಯಾಯ ಒದಗಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ವಿಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಬ್ಯಾಂಕ್ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಸಮಯ ಕೋರಿದ್ದು, ಕಷ್ಟಕಾಲಕ್ಕೆಂದು ನಂಬಿ ಚಿನ್ನ ಇಟ್ಟಿದ್ದ ಗ್ರಾಹಕರು ಆತಂಕದಲ್ಲಿದ್ದಾರೆ.

ಗ್ರಾಹಕರೇ, ಚಿನ್ನವಿಡುವ ಮುನ್ನ ಈ 4 ಸೂತ್ರ ಪಾಲಿಸಿ:

ಈ ಘಟನೆ ನಮಗೆಲ್ಲರಿಗೂ ಒಂದು ಎಚ್ಚರಿಕೆ ಗಂಟೆ. ಮುಂದಿನ ಬಾರಿ ನೀವು ಚಿನ್ನ ಅಡವಿಡುವಾಗ ಈ ಅಂಶಗಳನ್ನು ಮರೆಯಬೇಡಿ:

  • ತೂಕ ಪಕ್ಕಾ ಇರಲಿ: ಚಿನ್ನ ಕೊಡುವ ಮುನ್ನ ಮನೆಯಲ್ಲೇ ತೂಕ ಮಾಡಿ ಮತ್ತು ಬ್ಯಾಂಕ್‌ನಲ್ಲಿ ತೂಕ ಮಾಡಿದಾಗ ಅದು ನಿಖರವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
  • ಫೋಟೋ ಸಾಕ್ಷಿ: ಒಡವೆಯನ್ನು ಬ್ಯಾಂಕ್ ಸಿಬ್ಬಂದಿಗೆ ಕೊಡುವ ಮುನ್ನ, ಅವರ ಮುಂದೆಯೇ ಅದನ್ನು ಫೋಟೋ ಮತ್ತು ವಿಡಿಯೋ ಮಾಡಿಕೊಳ್ಳಿ.
  • ವಿವರ ಬರೆದಿಟ್ಟುಕೊಳ್ಳಿ: ನೆಕ್ಲೆಸ್ ಆಗಿದ್ದರೆ ಎಷ್ಟು ಗುಂಡುಗಳಿವೆ, ಬಳೆಯಾಗಿದ್ದರೆ ಎಲ್ಲೆಲ್ಲಿ ಡ್ಯಾಮೇಜ್ ಇದೆ ಎಂಬ ವಿವರ ನಿಮ್ಮ ಬಳಿ ಬರೆದಿಟ್ಟುಕೊಳ್ಳಿ.
  • ವಾಪಸ್ ಪಡೆಯುವಾಗ ಎಚ್ಚರ: ಸಾಲ ತೀರಿಸಿ ಒಡವೆ ವಾಪಸ್ ಪಡೆಯುವಾಗ, ಬ್ಯಾಂಕ್ ಕೌಂಟರ್ ಬಿಡುವ ಮುನ್ನವೇ ತೂಕ ಮತ್ತು ಡಿಸೈನ್ ಸರಿಯಾಗಿದೆಯೇ ಎಂದು ಪರಿಶೀಲಿಸಿ.

 

Advertisement

Chetan Yedve

Chetan Yedve is the founder of Karnataka Times and a digital media strategist known for delivering clear, reliable and timely news to readers across Karnataka. He focuses on honest reporting, technology-driven storytelling and building trustworthy online platforms.

LATEST POSTS

Leave a Comment