Hijab: ಕರ್ನಾಟಕದ ನಂತರ ಮತ್ತೊಂದು ರಾಜ್ಯದಲ್ಲಿ ಶಾಲೆಯಲ್ಲಿ ಹಿಜಾಬ್ ನಿಷೇದಕ್ಕೆ ಮುಂದಾದ ಸರ್ಕಾರ!
ಭಾರತವೂ ಐಕ್ಯತೆಯ ರಾಷ್ಟ್ರ ಇಲ್ಲಿರುವ ಜನರೆಲ್ಲರೂ ಸಮಾನರು ಎಂಬುದು ಸಂವಿಧಾನ ಮೂಲ ಮಂತ್ರವಾಗಿದ್ದರೂ ಜಾತಿ, ಉಪಜಾತಿ ಧರ್ಮಗಳ ನಡುವಿನ ವೈಮನಸ್ಸು ಯಾವಾಗಲೂ ಐಕ್ಯತೆಯ ಅಂಶವನ್ನು ಅಲ್ಲೆಗೆಳೆಯುತ್ತಲೇ ಇರುತ್ತದೆ ಈ ನೆಲೆಯಲ್ಲಿ ಕಳೆದ ಕೆಲ ವರ್ಷದಿಂದ ಹಿಂದೂ ಮುಸ್ಲಿಂ ನಡುವೆ ಉಂಟಾದ ಜಗಳಕ್ಕೆ ಮುಖ್ಯ ಕಾರಣವಾದದ್ದು ಹಿಜಾಬ್ (Hijab) ಧಾರಣೆ ಎಂದು ಹೇಳಬಹುದು. ಶಾಲಾ ಕಾಲೇಜು ಮಕ್ಕಳು ಸಮಾನತೆ ನೆಲೆಯಲ್ಲಿ ಇರಬೇಕು ಹಿಜಾಬ್ ಧರಿಸುವ ಪತಿಪಾಠ ಶಾಲೆಗೆ ಅಗತ್ಯವೇ ಎಂಬ ಪ್ರಶ್ನೆ ಉದ್ಭವಿಸಿತ್ತು. ಹೀಗಾಗಿ ಹಿಂದಿನ ಬಿಜೆಪಿ ಸರಕಾರ ಹಿಜಾಬ್ ನಿಷೇಧ ಮಾಡಿತ್ತು ಬಳಿಕ ಈಗಿನ ಸರಕಾರ ಕರ್ನಾಟಕದಲ್ಲಿ ಹಿಜಾಬ್ ಧಾರಣೆಗೆ ಸಮ್ಮತಿಸಿದ್ದು ಈ ವಿಚಾರ ಇಂದಿಗೂ ಬೂದಿ ಮುಚ್ಚಿದ ಕೆಂಡದಂತಿದೆ.
Hijab ವಿರುದ್ಧ ಪ್ರತಿಭಟನೆ:
ಇದರ ನಡುವೆಯೇ ಕರ್ನಾಟಕ ರಾಜ್ಯದ ಬೆನ್ನಲ್ಲೆ ಈಗ ಮತ್ತೊಂದು ರಾಜ್ಯ ಹಿಜಾಬ್ (Hijab)ನಿಷೇಧ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ರಾಜಸ್ಥಾನದಲ್ಲಿ ಹಿಜಾಬ್ ನಿಷೇಧದ ಮಾತು ಕೇಳಿ ಬರುತ್ತಲಿದೆ. ಹಿಜಾಬ್ ವಿವಾಧಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಲ್ಮುಕುಂದ್ ಆಚಾರ್ಯ ಅವರು ತಮ್ಮ ವಾದವನ್ನು ಮಂಡಿಸಿದ್ದು ಇವರ ವಿರುದ್ಧ ಮುಸ್ಲಿಂ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಶಾಲೆಯೊಂದರ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಹಿಜಾಬ್ ಧರಿಸುವುದು ತಪ್ಪು ಎಂಬಂತೆ ಹೇಳಿಕೆ ನೀಡಿದ್ದಾರೆ. ಹಾಗಾಗಿ ಆ ಶಾಲಾ ಆಸು ಪಾಸಿನ ಮುಸ್ಲಿಂ ಸಮುದಾಯದವರು ಕ್ಷಮೆ ಯಾಚಿಸಲು ಆಗ್ರಹಿಸಿದ್ದರು. ಇದೀಗ ಈ ಪ್ರಕರಣದ ಬೆನ್ನಲ್ಲೆ ಬಿಜೆಪಿ ಸರಕಾರದ ಸಚಿವ ಡಾ. ಕಿರೋದಿಲಾಲ್ ಮೀನಾ (Kirodi Lal Meena) ಕೂಡ ತಮ್ಮ ನಿಲುವನ್ನು ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಮಾತಾಡಿದ್ದ ಕಿರೋದಿಲಾಲ್ ಅವರು ಸಚಿವ ಸಂಪುಟದಲ್ಲಿ ತಮ್ಮ ನಿಲುವನ್ನು ತಿಳಿಸಿದ್ದಾರೆ. ಭಾರತದಲ್ಲಿ ಎಲ್ಲ ಪ್ರಜೆಗಳು ಸಮಾನರು. ಹಿಜಾಬ್ ಅನ್ನು ಬೆಂಬಲಿಸುವವರು ಖಂಡಿತವಾಗಿ ಮಕ್ಕಳನ್ನು ಶಿಕ್ಷಿತರನ್ನಾಗಿ ಇರಲು ಬಿಡಲಾರರು. ವಿದ್ಯಾಭ್ಯಾಸಕ್ಕೆ ಬೆಂಬಲಿಸಲಾರರು. ಮುಸ್ಲಿಂಮರ ಡಿಎನ್ ಎ ಇಲ್ಲಿನ ಹಿಂದೂಸ್ತಾನದ್ದಾಗಿದೆ ಎಂದು ಅವರು ಹೇಳಿದ್ದಾರೆ.
ನಿಷೇದ ಜಾರಿ:
ಹಿಜಾಬ್ (Hijab) ಹಾಗೂ ಬುರ್ಖಾ (Burqa) ಧರಿಸುವುದು ಮೋಘಲರಿಂದ ಭಾರತಕ್ಕೆ ಬಂದ ಸಂಪ್ರದಾಯವಾಗಿದೆ. ಇಂದು ಅನೇಕ ಮುಸ್ಲಿಂ ರಾಷ್ಟ್ರದಲ್ಲಿ ಹಿಜಾಬ್ ಧರಿಸದಿರುವುದು ವಾಡಿಕೆ ಇದೆ. ಹಾಗಾಗಿ ಯಾವ ರಾಜ್ಯದಲ್ಲಿ ಹಿಜಾಬ್ ಧರಿಸುವುದು ಅಧಿಕ ವಿದೆ ಹಾಗೂ ಎಲ್ಲೆಲ್ಲ ಹಿಜಾಬ್ ಧಾರಣೆ ನಿಷೇಧವಾಗಿದೆ ಎಂಬ ಬಗ್ಗೆ ವರದಿ ಸಲ್ಲಿಸಲಾಗುವುದು. ಶಾಲೆಗಳಲ್ಲಿ ಡ್ರೆಸ್ ಕೋಡ್ ಸಮಾನತೆ ಇರಬೇಕು ಎಂಬ ನಿಯಮ ಇರುವುದು ತಿಳಿದೆ ಇದೆ. ಹಾಗಾಗಿ ಸಿಎಂ ಭಜನ್ ಲಾಲ್ (CM Bhajan Lal) ನೇತೃತ್ವದಲ್ಲಿ ಹಿಜಾಬ್ ಶೈಕ್ಷಣಿಕ ವಿಚಾರದೆಡೆ ನಿಷೇಧಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಬಿಜೆಪಿ ಶಾಸಕ ಬಲ್ಮುಕುಂದ್ ಮತ್ತು ಸಚಿವ ಡಾ. ಕಿರೋದಿಲಾಲ್ ಮೀನಾ (Kirodi Lal Meena) ಅವರ ಈ ಧೋರಣೆ ವಿರುದ್ಧವಾಗಿ ರಾಜಸ್ಥಾನದಲ್ಲಿ ಪ್ರತಿಭಟನೆ ಬಿಸಿ ಹಬ್ಬುತ್ತಿದೆ. ರಾಜಸ್ಥಾನದ ಜೈಪುರ ಸುಭಾಷ್ ನಗರ ಚೌಕ್ ಪೋಲಿಸ್ ಠಾಣೆಗೆ ಸುತ್ತುವರಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ಮುಸ್ಲಿಂ ವಿದ್ಯಾರ್ಥಿಗಳು, ಮುಸ್ಲಿಂ ಸಮುದಾಯದವರು ಪಾಲ್ಗೊಂಡಿದ್ದು ಶಾಸಕರು ಮತ್ತು ಸಚಿವರು ಈ ರೀತಿ ಹೇಳಿಕೆ ನೀಡಿದ್ದು ಸರಿಯಲ್ಲ ಅವರು ಬಹಿರಂಗವಾಗಿ ಮುಸ್ಲಿಂ ಸಮುದಾಯದ ಭಾವನೆಗೆ ಧಕ್ಕೆ ತಂದಿದ್ದಾರೆ ಹಾಗಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಮೂಲಕ ಅಲ್ಲಿನ ಪೊಲೀಸರು ಪ್ರತಿಭಟನೆ ತಡೆದು ಎರಡು ದಿನದಲ್ಲಿ ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ. ಈ ಮೂಲಕ ರಾಜಸ್ಥಾನದಲ್ಲಿ ಕೂಡ ಹಿಜಾಬ್ ವಿವಾಧದ ಮಾತು ಬುಗಿಲೆದ್ದಿದೆ.