Pumpset: ಪಂಪ್ಸೆಟ್ ಇರುವ ರೈತರು ಈ ಕೆಲಸ ಮಾಡಲೇಬೇಕು, ಸರ್ಕಾರದ ಹೊಸ ಆದೇಶ!
ಇತ್ತೀಚಿನ ದಿನಗಳಲ್ಲಿ ದಿನಕ್ಕೊಂದು ಹೊಸ ನಿಯಮ ಜಾರಿ ಆಗುತ್ತಿದೆ. ಹೌದು ಇದೀಗ ರೈತರಿಗೆ ಮತ್ತೊಂದು ಗೊಂದಲ ಎದುರಾಗಿದೆ. ಕರ್ನಾಟಕದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳು ನೀರಾವರಿ ಪಂಪ್ಸೆಟ್ ಹೊಂದಿರುವ ರೈತರು ಈ ನಂಬರ್ಗೆ ಆಧಾರ್ ಜೋಡಣೆ ಮಾಡಲು ಸೂಚನೆ ನೀಡುತ್ತಿವೆ. ಇದು ರೈತರಲ್ಲಿ ಗೊಂದಲ ಹುಟ್ಟು ಹಾಕಿದ್ದು, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಯಾವ ಪಂಪ್ ಸೆಟ್ ಗಳಿಗೆ ನಿಯಮ ಜಾರಿ?
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗದ ನಿರ್ದೇಶನಗಳ ಪ್ರಕಾರ 10 ಹೆಚ್ಪಿ ಮತ್ತು ಅದಕ್ಕಿಂತ ಕಡಿಮೆ ವಿದ್ಯುತ್ ಹೊಂದಿರುವ ನೀರಾವರಿ ಪಂಪ್ಸೆಟ್ ಗ್ರಾಹಕರು ತಮ್ಮ ಸ್ಥಾವರ ಸಂಖ್ಯೆಗೆ ಆಧಾರ್ ಜೋಡಣೆ ಮಾಡಬೇಕಾಗಿರುತ್ತದೆ ಎಂಬುದು ಸೂಚನೆಯಾಗಿದೆ. ಈ ಕುರಿತು ವಿದ್ಯುತ್ ಸರಬರಾಜು ಕಂಪನಿಗಳು ಸೂಚನೆಯನ್ನು ನೀಡುತ್ತಿವೆ. ಆದರೆ ಹೀಗೆ ಆಧಾರ್ ಲಿಂಕ್ ಮಾಡಲು ಯಾವುದೇ ಅಂತಿಮ ದಿನಾಂಕವನ್ನು ನಿಗದಿ ಮಾಡಿಲ್ಲ. ನೀರಾವರಿ ಪಂಪ್ಸೆಟ್ ಹೊಂದಿರುವ ಗ್ರಾಹಕರು ಸಮೀಪದ ಬೆಸ್ಕಾಂ (Bescom) ಉಪವಿಭಾಗ ಕಛೇರಿಯನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಬೇಕಾಗಿ ತಿಳಿಸಲಾಗುತ್ತಿದೆ.
ಆಧಾರ್ ಕಾರ್ಡ್ ಜೋಡಣೆಯಲ್ಲಿ ಗೊಂದಲ
ರಾಜ್ಯಾದ್ಯಂತ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಬೆಳೆ ನಷ್ಟ ಮಾಡಿಕೊಂಡು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಈ ಆದೇಶ ಗೊಂದಲ ಮೂಡಿಸಿದೆ. ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಲು ಕೃಷಿ ಪಂಪ್ಸೆಟ್ (Pumpset) ಗಳಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುತ್ತಿದೆ. ಮೀಟರ್ ಅಳವಡಿಕೆ ಮಾಡಲು ಆಧಾರ್ ಲಿಂಕ್ ಮಾಡಲು ಕೇಳುತ್ತಿರುವುದು ಏಕೆ? ಎಂಬುದು ರೈತರ ಪ್ರಶ್ನೆಯಾಗಿದೆ.
2023ರ ಮಾರ್ಚ್ನಲ್ಲಿಯೇ ಕೆಇಆರ್ಸಿ (KERC) ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೆ 6 ತಿಂಗಳಿನಲ್ಲಿ ಕೃಷಿ ಪಂಪ್ಸೆಟ್ ಮತ್ತು ಆಧಾರ್ ಜೋಡಣೆ ಮಾಡುವ ಕುರಿತು ಸೂಚನೆ ನೀಡಿತ್ತು. ಈಗ ಎಸ್ಕಾಂಗಳು ಪದೇ ಪದೇ ಈ ಕುರಿತು ರೈತರಿಗೆ ಸೂಚನೆ ನೀಡುತ್ತಿವೆ.
ಸರ್ಕಾರ ಆಧಾರ್ ಕಾರ್ಡ್ ಜೋಡಣೆ ಕಡ್ಡಾಯ ಅಂತಿರೋದ್ಯಾಕೆ?
ಸರ್ಕಾರ ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆ ಮಾಡುವ ಹುನ್ನಾರ ನಡೆಸಿದೆ. ಆದ್ದರಿಂದ ಆಧಾರ್ ಜೋಡಣೆಗೆ ತಿಳಿಸಲಾಗುತ್ತಿದೆ ಎಂಬುದು ರೈತರ ಆರೋಪವಾಗಿದೆ. ಆಧಾರ್ ಜೋಡಣೆ ಮಾಡದಿದ್ದರೆ ಸಬ್ಸಿಡಿ ನಿಲ್ಲಿಸಲಾಗುತ್ತದೆ ಎಂಬ ಸುದ್ದಿಯೂ ಹಬ್ಬುತ್ತಿದೆ. ಕೃಷಿ ಚಟುವಟಿಕೆಗೆ 10 ಹೆಚ್ಪಿ ತನಕ ವಿದ್ಯುತ್ ಉಚಿತವಾಗಿ ಪೂರೈಕೆ ಆಗುತ್ತಿದೆ. 10 ಹೆಚ್ಪಿ (10hp) ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಮಾತ್ರ ಹಣವನ್ನು ಕಟ್ಟಬೇಕು. ಈಗ ಪಂಪ್ಸೆಟ್ ಮತ್ತು ಆಧಾರ್ ಲಿಂಕ್ ಮಾಡಿ ಸರ್ಕಾರ ಮಾಡುವುದೇನು? ಎಂಬುದು ರೈತರ ಪ್ರಶ್ನೆ. ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಹಾಕಿದರೆ ಹೆಚ್ಚಿನ ಬಿಲ್ ಅನ್ನು ರೈತರು ಪಾವತಿ ಮಾಡಬೇಕಾಗುತ್ತದೆ ಎಂಬುದು ಆತಂಕವಾಗಿದೆ. ಈಗಾಗಲೇ ರಾಜ್ಯದ ಹಲವು ಕಡೆ ಪಂಪ್ ಸೆಟ್ ಮತ್ತು ಆಧಾರ್ ಲಿಂಕ್ ವಿರೋಧಿಸಿ ರೈತರು ಪ್ರತಿಭಟನೆ ಮಾಡಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಸರ್ಕಾರದ ಹೊಸ ನಿಯಮ ರೈತರ ಗೊಂದಲಕ್ಕೆ ದೂಡಿದೆ.