Healthy Lifestyle: ಈ 5 ಜೀವನ ಶೈಲಿಯನ್ನು ರೂಢಿಸಿಕೊಂಡು ನೋಡಿ, ಜೀವನವೇ ಬದಲಾಗುತ್ತದೆ.
ನಮ್ಮ ಚಿಂತನೆಗಳೇ ನಮ್ಮೊಳಗಿನ ಭಾವನೆಗಳನ್ನು ಸೃಷ್ಟಿಸುತ್ತವೆ. ಆ ಭಾವನೆಗಳು ನಮ್ಮ ವರ್ತನೆ, ಕಾರ್ಯಚಟುವಟಿಕೆಯನ್ನು ರೂಪಿಸುತ್ತವೆ. ನಾವು ಇತರರೊಂದಿಗೆ ಹೇಗೆ ವರ್ತಿಸುತ್ತೇವೆ ಎಂಬುದು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ನಮ್ಮ ಯೋಚನೆ ಹೇಗೋ, ಹಾಗೆಯೇ ನಮ್ಮ ವರ್ತನೆ, ನಾವು ಮಾಡುವ ಕೆಲಸವೂ ಇರುತ್ತದೆ. ಮುಖ ಮನಸ್ಸಿನ ಕನ್ನಡಿ ಎನ್ನುತ್ತಾರೆ. ನಮ್ಮ ಮುಖದ ಮೇಲಿನ ಭಾವನೆಗಳು ನಮ್ಮ ಆ ಕ್ಷಣದ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ. ಅದೇ ರೀತಿ ಸಕಾರಾತ್ಮಕ ಚಿಂತನೆ ಇರುವಲ್ಲಿ ಭಾವನೆ ಮತ್ತು ವರ್ತನೆ ಕೂಡಾ ಸಕಾರಾತ್ಮಕವೇ ಆಗಿರುತ್ತದೆ.
ಹಾಗೆಯೇ ನಕಾರಾತ್ಮಕ ಚಿಂತನೆ ಇದ್ದಲ್ಲಿ ಭಾವನೆ ಮತ್ತು ವರ್ತನೆ ನಕಾರಾತ್ಮಕವಾಗಿರುತ್ತದೆ. ಅದರಿಂದ ಸೋಲು ಮತ್ತು ನಿರಾಶೆ ಮಾತ್ರ ನಮ್ಮನ್ನು ಹಿಂಬಾಲಿಸುತ್ತದೆ. ಉದಾಹರಣೆಗೆ ಕತ್ತಲಾದಾಗ ಅಥವಾ ಕತ್ತಲು ತುಂಬಿದ ಕೋಣೆಗೆ ಹೋದಾಗ ಬೆಳಕನ್ನು ಹುಡುಕುತ್ತೀರಿ. ಬೆಳಕು ಬರಲು ದೀಪ ಹಚ್ಚುತ್ತೀರಿ. ಅಂದರೆ ಕತ್ತಲಾದಾಗ ಬೆಳಕು ಹಚ್ಚಬೇಕು ಎನ್ನುವ ಅರಿವು ಇದೆ ಎಂದಾಯ್ತು.
ಹಾಗೆಯೇ ಸಕಾರಾತ್ಮಕ ಚಿಂತನೆ, ನಕಾರಾತ್ಮಕ ಆಲೋಚನೆ ನಮ್ಮ ಮನಸ್ಸನ್ನು ಅವಲಂಬಿಸಿರುತ್ತದೆ. ಅದರಲ್ಲಿ ಯಾವುದನ್ನು ಬೆಳಗಿಸಬೇಕು ಎನ್ನುವ ಆಯ್ಕೆ ನಮಗೇ ಬಿಟ್ಟಿದ್ದು. ಬದಲಾವಣೆ ನಮ್ಮೊಳಗೇ ನಡೆಯುವ ಆಯ್ಕೆಯ ಪ್ರಕ್ರಿಯೆ. ನಮ್ಮ ನಕಾರಾತ್ಮಕ ನಂಬಿಕೆಗಳನ್ನು ಬದಲಾಯಿಸಿಕೊಳ್ಳದೆ ಹೋದರೆ ಬದಲಾಗುವುದಕ್ಕೆ ಸಾಧ್ಯವಿಲ್ಲ.
ನಂಬಿಕೆ, ಚಿಂತನೆ, ಭಾವನೆಗಳಲ್ಲಿ ಬದಲಾವಣೆ ಮಾಡಿಕೊಂಡರೆ ಮಾತ್ರ ಪರಿವರ್ತನೆಯ ಅನುಭವವನ್ನು ನಮ್ಮದಾಗಿಸಿಕೊಳ್ಳಬಹುದು. ಪ್ರತಿಭೆ ಎಂಬುದು ಒಬ್ಬರ ಸ್ವತ್ತಲ್ಲ. ಆದರೂ ಎಲ್ಲರೂ ಯಶಸ್ಸನ್ನು ಕಾಣುವುದಕ್ಕೆ ಸಾಧ್ಯವಾಗುವುದಿಲ್ಲ. ಕಾರಣ ಇಷ್ಟೇ ನಾವು ಏನನ್ನು ಯೋಚನೆ ಮಾಡುತ್ತೇವೆಯೋ ಹಾಗೆಯೇ ಆಗುತ್ತೇವೆ. ನನ್ನಿಂದ ಮಾಡುವುದಕ್ಕೆ ಸಾಧ್ಯ ಎನ್ನುವ ಸಕಾರಾತ್ಮಕ ಮನಸ್ಥಿತಿಯನ್ನು ಬೆಳೆಸಿಕೊಂಡು, ನಕಾರಾತ್ಮಕ ಯೋಚನೆಗಳಿಗೆ ಅವಕಾಶ ಮಾಡಿಕೊಡದಿದ್ದರೆ ಅಂದುಕೊಂಡಂತೆ ಯಶಸ್ವಿಯಾಗುತ್ತೇವೆ. ಅಂತಹ ಬದಲಾವಣೆಗೆ ನಮ್ಮನ್ನು ಒಡ್ಡಿಕೊಳ್ಳಲು ನಮ್ಮ ಪ್ರಯತ್ನವೇ ಮೂಲ ಆಗಿರುತ್ತದೆ.
ಯೋಗ ಮಾಡುವುದರಿಂದ
ಯೋಗವು ಯಾವುದೇ ರೀತಿಯ ಒತ್ತಡ, ಖಿನ್ನತೆ, ಆತಂಕ ಮತ್ತು ಇತರ ಮಾನಸಿಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ವ್ಯಾಯಾಮ ಅಭ್ಯಾಸ ಮಾಡುವುದರಿಂದ ಅಂದರೆ ಸೂರ್ಯ ನಮಸ್ಕಾರ, ಯೋಗ ಮುದ್ರೆಗಳು, ಪ್ರಣಾಯಾಮ ಮತ್ತು ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ಮನಸ್ಥಿತಿ ಸುಧಾರಿಸುತ್ತದೆ. ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಇದು ಸಹಾಯಕ. ಜೊತೆಗೆ ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ದೈನಂದಿನ ದಿನಚರಿ ರಚಿಸುವುದರಿಂದ
ದೈನಂದಿನ ದಿನಚರಿ ರಚಿಸುವುದು ಮತ್ತೊಂದು ಒಳ್ಳೆಯ ಅಭ್ಯಾಸವಾಗಿದೆ. ದಿನದ ಅಥವಾ ವಾರದ ಲೆಕ್ಕದಲ್ಲಿ ದಿನಚರಿಯನ್ನು ಆಯೋಜಿಸವುದು ಅಗತ್ಯ ಕಾರ್ಯಗಳಿಗೆ ಆದ್ಯತೆ ನೀಡಲು ನಿಮಗೆ ಸಹಾಯ ಮಾಡುತ್ತದೆ. ಯಾವುದು ಮುಖ್ಯ ಕೆಲಸ, ಯಾವುದನ್ನು ಮೊದಲು ಮಾಡಬೇಕು ಎಂಬುದನ್ನು ದಿನಚರಿಯಲ್ಲಿ ನಿರ್ಧರಿಸುವುದರಿಂದ ನಿಮಗೆ ಗೊಂದಲ ತಪ್ಪುತ್ತದೆ. ಇದರಿಂದ ಸಮಯ ನಿರ್ವಹಣೆ ಸುಲಭವಾಗುತ್ತದೆ.
ಪೌಷ್ಟಿಕ ಆಹಾರ ಸೇವನೆ
ನಾಲಗೆಗೆ ರುಚಿಯಾಗಿರುವುದೆಲ್ಲವೂ ದೇಹಕ್ಕೆ ವಿಹಿತವಾಗಿರುವುದಿಲ್ಲ, ಹೀಗಾಗಿ ಪೌಷ್ಟಿಕ ಆಹಾರ ಸೇವನೆಗೆ ಮಹಿಳೆಯರು ಹೆಚ್ಚಿನ ಆದ್ಯತೆ ನೀಡಬೇಕು. ಹೀಗಾದ್ದಲ್ಲಿ ರೋಗ- ರುಜಿನೆಗಳಿಂದ ದೂರವಿರಲು ಸಾಧ್ಯವಾಗುತ್ತದೆ ಹಾಗಾಗಿ ಪೌಷ್ಟಿಕ ಆಹಾರವನ್ನು ಸೇವಿಸಿ ಆರೋಗ್ಯವಾಗಿರಬೇಕು. ಹಾಗಾದರೆ ಮಾತ್ರ ನಾವು ಸಕಾರಾತ್ಮಕ ಯೋಚನೆಯನ್ನು ಹೊಂದಿರಲು ಸಾಧ್ಯ.
ಉತ್ತಮ ನಿದ್ರೆ
ಒಂದು ದಿನ ನಿದ್ರಾಹೀನತೆ ಬಳಲಿಕೆಯ ನಂತರ ನಿಮ್ಮ ಆರೋಗ್ಯದಲ್ಲಿ ಅನೇಕ ರೋಗಗಳು ಉಂಟುಮಾಡುತ್ತದೆ. ನಮ್ಮ ದೇಹಕ್ಕೆ ಕನಿಷ್ಠ 7 ರಿಂದ 8 ಗಂಟೆಗಳ ನಿದ್ದೆ ಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಉತ್ತಮ ರಾತ್ರಿ ನಿದ್ರೆಯು ದಿನವಿಡೀ ನಮ್ಮನ್ನು ಶಕ್ತಿಯುತವಾಗಿರಿಸುತ್ತದೆ. ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿರುವ ಜನರನ್ನು ಸ್ಲೀಪ್ ಸಿಂಡ್ರೋಮ್ ಎಂದೂ ಕರೆಯಲಾಗುತ್ತದೆ. ಹೀಗಾಗಿ ಜೀವನಶೈಲಿಯಲ್ಲಿ ನಾವು ಕೆಲವು ಅಭ್ಯಾಸಗಳನ್ನು ಸೇರಿಸಿದರೆ, ಅದರ ಸಕಾರಾತ್ಮಕ ಪರಿಣಾಮವು ಖಂಡಿತವಾಗಿಯೂ ನಿದ್ದೆ ಸರಿಯಾಗಿಸುತ್ತದೆ. ಹಾಗಾಗಿ ಮಲಗುವ ಮುನ್ನ ಆಲ್ಕೋಹಾಲ್ ಸೇವನೆ ಮಾಡದಿರಿ.
ಒಳ್ಳೆಯ ಬಾಂಧವ್ಯ ಹೊಂದಿರಿ.
ಸುಂದರ ಬದುಕು ಪ್ರತಿಯೊಬ್ಬರ ಕನಸಾಗಿದೆ. ಅದನ್ನು ಸಾರ್ಥಕಗೊಳಿ ಸುವುದು ಅವರವರ ಕೈಯಲ್ಲಿದೆ. ಆ ಕನಸು ನನಸಾಗಬೇಕಾದರೆ ನಮ್ಮನ್ನು ಚಿಂತೆ, ಖೇದ, ದುಗುಡದಂತಹ ಋಣಾ ತ್ಮಕ ಭಾವಗಳು ಬಾಧಿಸಬಾರದು. ಪ್ರತಿಯೊಬ್ಬರಿಗೂ ಅವರದೇ ಆದ ಭಾವನಾ ಲೋಕವಿರುವುದರಿಂದ ಆಸೆಗಳು, ಆಚಾರ- ವಿಚಾರಗಳು, ಕಾರ್ಯ ವೈಖರಿಗಳು ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತವೆ. ನಮ್ಮ ಖುಷಿ, ನೆಮ್ಮದಿ, ದುಃಖ ಗಳೆಲ್ಲವೂ ಸುತ್ತಲಿನ ಜನರು, ಪರಿಸ್ಥಿತಿಗಳನ್ನು ಅವಲಂಬಿಸಿರುತ್ತವೆ. ಹೀಗಾಗಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಪ್ರಯತ್ನಿಸಿದರೆ ಉತ್ತಮ.