Areca cultivation: ಅಡಿಕೆ ಬೆಳೆದು ಆದಾಯ ಗಳಿಸಬೇಕು ಅಂದುಕೊಂಡವರು ಈ ತಪ್ಪು ಮಾಡಲೇಬೇಡಿ! ಎಲ್ಲ ಶ್ರಮ ವ್ಯರ್ಥವಾಗುತ್ತೆ.
Areca cultivation: ಪ್ರಸ್ತುತ ಕೃಷಿ ವಲಯದಲ್ಲಿ ರೈತರು ಕೆಲವು ಮಿಶ್ರ ಬೆಳೆಯನ್ನು ಬೆಳೆಯುತ್ತಿದ್ದು ಅದರ ಕುರಿತಾಗಿ ಕತ್ತಲಗೆರೆ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿ ಗಂಗಾಧರಪ್ಪಗೌಡ ಬಿರಾದಾರ್ ರೈತರಿಗೆ ವಿಶೇಷ ಸಲಹೆ ನೀಡಿದ್ದಾರೆ. ಮತ್ತು ಕೆಲವು ಮಿಶ್ರ ಬೆಳೆಯನ್ನು ಸರಿಯಾದ ಮಾಹಿತಿ ಇಲ್ಲದೆ ಬೆಳೆಯುವುದರಿಂದ ಉಂಟಾಗುವ ಸಮಸ್ಯೆಗಳ ಕುರಿತು ಸಮಗ್ರವಾಗಿ ತಿಳಿಸಿದ್ದಾರೆ. ಸರಿಯಾದ ಮಾಹಿತಿ ಇಲ್ಲದೆ ನಾಟಿ ಮಾಡುವುದರಿಂದ ಸಸಿಗಳ ನಾಶ ಉಂಟಾಗುತ್ತಿದ್ದು ಅದನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೂಡ ತಿಳಿಸಿದ್ದಾರೆ.
ಇನ್ನು ಯಾವ ಬೆಳೆಯೂ ಯಾವ ಹಾನಿಗೆ ಒಳಗಾಗುತ್ತವೆ ಅದರ ಪರಿಹಾರವೇನು ಎಂದು ತಿಳಿದುಕೊಳ್ಳೋಣ:
ಇತ್ತೀಚಿನ ದಿನಗಳಲ್ಲಿ ಅಡಿಕೆ ತೋಟದಲ್ಲಿ(Arecanut Plantation ) ಪಪ್ಪಾಯ ಗಿಡಗಳನ್ನು ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತಿದೆ. ಅದರಿಂದ ಲಾಭ ಉಂಟಾಗುತ್ತಿರುವುದು ಸತ್ಯವಾದರೂ ಅದನ್ನು ಸರಿಯಾದ ಮಾಹಿತಿ ಇಲ್ಲದೆ ನಾಟಿ ಮಾಡುವುದರಿಂದ ಹಲವು ರೀತಿಯಾದಂತಹ ರೋಗ ಲಕ್ಷಣಗಳು ಸಸಿಗಳಲ್ಲಿ ಕಂಡು ಬರುತ್ತಿದೆ. ಇನ್ನು ರೋಗ ಲಕ್ಷಣಗಳು ಇರುವ ಸಸಿಗಳ ಎಲೆ ಮತ್ತು ಬೇರಿನ ಮೇಲೆ ಗಾಯ ಆಗಿರುವ ರೀತಿಯ ಕಲೆಗಳು ಕಾಣಸಿಗುತ್ತವೆ. ಅಂತಹ ರೋಗ ಲಕ್ಷಣಗಳು ಇರುವ ಸಸಿಗಳಲ್ಲಿ ಡ್ಯಾಂಪಿಂಗ್ ಆಫ್ ಶಿಲೀಂದ್ರ ಎಂಬ ರೋಗವು ಹರಡುತ್ತದೆ. ಇದರಿಂದ ಸಸಿಗಳು ನಿಧಾನವಾಗಿ ಸಾವನ್ನಪ್ಪುತ್ತವೆ.
ಈ ಡ್ಯಾಂಪಿಂಗ್ ಆಫ್ ಶಿಲೀಂದ್ರ ರೋಗವನ್ನು ತಡೆಗಟ್ಟಲು ಇರುವ ಉಪಾಯಗಳು:
ಮೊದಲಿಗೆ ನಾಟಿ ಮಾಡಲು ಸಸಿಗಳನ್ನು ಕೊಳ್ಳುವಾಗ ಪ್ರತಿಷ್ಠಿತ ನರ್ಸರಿಗಳಿಂದ ಸಸಿಗಳ ಖರೀದಿ ಮಾಡಬೇಕು. ರೋಗ ನಿರೋಧಕ ಶಕ್ತಿಯನ್ನು ಹೋಂದಿರುವಂತಹ ತಳಿಗಳನ್ನು ಆರಿಸಿ ನಾಟಿ ಮಾಡಬೇಕು. ಮತ್ತು ಸಸಿಗಳ ನಾಟಿಗೆ ಮುಂಚಿತವಾಗಿ ಮಣ್ಣಿಗೆ ಶಿಲೀಂದ್ರ ನಾಶಕಗಳನ್ನು ಸೇರಿಸಬೇಕು. ಈ ರೋಗ ಇರುವಂತಹ ಸಸಿಗಳು ಹೆಚ್ಚಿನ ತಾಪಮಾನದಲ್ಲಿ ಇದ್ದಾಗ ಸಸಿಗಳ ಕಾಂಡದ ಅಂಗಾಂಶ ಕುಸಿತ ಉಂಟಾಗಿ ಸಾವನ್ನಪ್ಪುತ್ತದೆ. ಅದರಿಂದ, ನಾಟಿಯ ನಂತರ ಈ ರೋಗ ಲಕ್ಷಣಗಳು ಕಂಡು ಬಂದಲ್ಲಿ ಪ್ರತಿ ಲೀಟರ್ ನೀರಿಗೆ ಎರಡು ಗ್ರಾಂ ಅಷ್ಷು ಶಿಲೀಂದ್ರ ನಾಶಕವನ್ನು ಸೇರಿಸಿ ನೀರನ್ನು ಸಿಂಪಡಿಸಬೇಕು.
ಇದರ ನಂತರವು ರೋಗ ಲಕ್ಷಣಗಳು ಸರಿಬರದೆ ರೋಗವು ಹತೋಟಿಗೆ ಸಿಗದೇ ಹೋದಾಗ ‘ಕ್ಯಾಪ್ರಟ್ರಾನ್ 50wp’ (capratron 50wp) ಎಂಬ ಶಿಲೀಂದ್ರ ನಾಶಕವನ್ನು ಸಸಿಗಳ ಬುಡದಲ್ಲಿ ಅಂದರೆ ಬೇರುಗಳು ನೆನೆಯುವಂತೆ ನೀರಿನೊಂದಿಗೆ ಸೇರಿಸಿ ಸಿಂಪಡಿಸಬೇಕು. ಇದರ ಜೊತೆಗೆ ಮತ್ತೊಂದು ಕ್ರಮ ಎಂದರೆ ಅಡಿಕೆ ಸಸಿಗಳಿಗೆ ಹಾಯಿಸುವ ನೀರು ಪಪ್ಪಾಯ ಸಸಿಗಳಿಗೆ ಅತಿಯಾದ ಶೀತ ಉಂಟುಮಾಡುವುದರಿಂದ ಪ್ರತಿ ಎರಡು ದಿನಕ್ಕೊಮ್ಮೆ ನೀರು ಹಾಯಿಸಬೇಕು. ಈ ರೀತಿಯಾಗಿ ಮಾಡುವುದರಿಂದ ಸಸಿಗಳು ಚೆನ್ನಾಗಿ ಬೆಳೆಯುತ್ತದೆ ಮತ್ತು ಒಳ್ಳೆಯ ಫಲವನ್ನು ಕೊಡುತ್ತದೆ ಎಂದು ಗಂಗಾಧರಪ್ಪಗೌಡ ಅವರು ತಿಳಿಸಿದರು.