Dwarakish: 81 ವರ್ಷಕ್ಕೆ ಬದುಕಿನ ಪಯಣ ಮುಗಿಸಿದ ದ್ವಾರಕೀಶ್! ಜರ್ನಿ ಹೀಗಿತ್ತು
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇವತ್ತು ನಿಜಕ್ಕೂ ಕೂಡ ಇದೊಂದು ಅತ್ಯಂತ ಕರಾಳ ದಿನ ಅಂತ ಹೇಳಬಹುದು. ಇತ್ತೀಚಿನ ವರ್ಷಗಳಲ್ಲಿ ನಾವು ನಮ್ಮ ಕನ್ನಡ ಚಿತ್ರರಂಗದ ಸಾಕಷ್ಟು ಶ್ರೇಷ್ಠ ವ್ಯಕ್ತಿತ್ವಗಳನ್ನು ಕಳೆದುಕೊಂಡಿದ್ದೇವೆ. ಅವರ ಸಾಲಿಗೆ ಈಗ ನಟ ನಿರ್ದೇಶಕ ಹಾಗೂ ನಿರ್ಮಾಪಕ ಆಗಿರುವಂತಹ ದ್ವಾರಕೀಶ್ (Dwarakish) ರವರು ಕೂಡ ಸೇರಿಕೊಂಡಿದ್ದಾರೆ.
ಕಳೆದ ಐವತ್ತು ವರ್ಷಗಳಿಗಿಂತಲೂ ಹೆಚ್ಚಾಗಿ ಕನ್ನಡ ಚಿತ್ರರಂಗ ಭಾಗ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಮಹತ್ತರವಾದ ಕೊಡುಗೆಗಳಿಂದ ಖ್ಯಾತ ನಾಮರಾಗಿರುವಂತಹ ದ್ವಾರಕೀಶ್ ರವರು ಇವತ್ತು ಬೆಳಗ್ಗೆ ತಮ್ಮ ನಿವಾಸದಲ್ಲಿ ಹೃದ-ಯಾಘಾತದಿಂದ ಮರ-ಣ ಹೊಂದಿದ್ದಾರೆ. ಇಡೀ ಕನ್ನಡ ಚಿತ್ರರಂಗವೇ ಅವರ ಅಗಲುವಿಕೆಗೆ ಕಂಬನಿ ಮಿಡಿದಿದೆ.
ದ್ವಾರಕೀಶ್ ಹಾಗೂ ಕನ್ನಡ ಚಿತ್ರರಂಗ:
ಕರ್ನಾಟಕದ ಕುಳ್ಳ ಎಂಬುದಾಗಿ ಖ್ಯಾತರಾಗಿರುವಂತಹ ದ್ವಾರಕೀಶ್ (Dwarakish) ರವರ ನಿಜವಾದ ಹೆಸರು ಬಂಗಲೆ ಶಾಮರಾವ್ ದ್ವಾರಕನಾಥ ಎನ್ನುವುದಾಗಿ. ಇದು ಸಾಕಷ್ಟು ಜನರಿಗೆ ತಿಳಿದಿಲ್ಲ. 1963 ರಿಂದ ಪ್ರಾರಂಭಿಸಿ ಇಂದಿನವರೆಗೂ ಕನ್ನಡ ಚಿತ್ರರಂಗದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಕೊಡುಗೆಯನ್ನು ದ್ವಾರಕೀಶ್ ರವರು ನೀಡಿದ್ದಾರೆ. ಹುಣಸೂರು ಕೃಷ್ಣಮೂರ್ತಿ (Hunsur Krishnamurthy) ನಿರ್ದೇಶನದಲ್ಲಿ ಮೂಡಿ ಬಂದ ವೀರ ಸಂಕಲ್ಪ ಸಿನಿಮಾದಲ್ಲಿ ಚಿಕ್ಕ ಪಾತ್ರವನ್ನು ನಿರ್ವಹಿಸುವ ಮೂಲಕ ತಮ್ಮ ಕನ್ನಡ ಚಿತ್ರರಂಗದ ಸಿನಿಮಾ ಜರ್ನಿಯನ್ನು ಪ್ರಾರಂಭಿಸುತ್ತಾರೆ.
1966 ರಲ್ಲಿ ಮಮತೆಯ ಬಂಧನ ಎನ್ನುವ ಸಿನಿಮಾನ ಸಹನಿರ್ಮಾಪಕರಾಗಿ ನಿರ್ಮಾಣ ಮಾಡಿರುತ್ತಾರೆ. ಆದರೆ ರಾಜಕುಮಾರ್ ಅವರ ಪ್ರೋತ್ಸಾಹದಿಂದಾಗಿ ನಿಜವಾದ ನಿರ್ಮಾಪಕರಾಗಿ ದ್ವಾರಕೀಶ್ ರವರು ಕಾಣಿಸಿಕೊಳ್ಳುವುದು 1969ರಲ್ಲಿ ಬಿಡುಗಡೆಯಾದಂತಹ ರಾಜಕುಮಾರ್ ನಾಯಕನಟನಾಗಿ ಕಾಣಿಸಿಕೊಂಡ ಹಾಗೂ ದ್ವಾರಕೀಶ್ ರವರು ಸಹ ಕಲಾವಿದನಾಗಿ ಕಾಣಿಸಿಕೊಂಡಿದ್ದ ಮೇಯರ್ ಮುತ್ತಣ್ಣ (Mayor Muthanna) ಸಿನಿಮಾದ ಮೂಲಕ.
ಈ ಸಿನಿಮಾದ ಮೂಲಕ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಪೂರ್ಣವಾಗಿ ಪರಿಚಿತರಾದ ದ್ವಾರಕೀಶ್ (Dwarakish) ರವರು ಒಂದಾದ ಮೇಲೆ ಒಂದರಂತೆ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿದ್ದಾರೆ. ಈ ಸಂದರ್ಭದಲ್ಲಿ ನಾವು ಅವರ ಹಾಗೂ ವಿಷ್ಣುವರ್ಧನ್ ರವರ ಜೋಡಿಯಲ್ಲಿ ಮೂಡಿಬಂದಂತಹ ಆಪ್ತಮಿತ್ರ ಸಿನಿಮಾನ ಮರೀಬಾರದು.
ತಮ್ಮ ಜೀವಿತಾವಧಿಯಲ್ಲಿ ಕನ್ನಡ ಚಿತ್ರರಂಗ ಮೆಚ್ಚುವಂತಹ ಸಿನಿಮಾಗಳನ್ನ ನಟ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ನೀಡಿದ್ದಾರೆ. ಕೆಲವು ವರ್ಷಗಳ ಹಿಂದೆಯಷ್ಟೇ ಶಿವಣ್ಣನಿಗೆ ನಿರ್ಮಾಣ ಮಾಡಿದ್ದ ಆಯುಷ್ಮಾನ್ ಭವ ಸಿನಿಮಾದ ವಿಚಾರವಾಗಿ ವಿವಾದಕ್ಕೆ ಕೂಡ ಒಳಗಾಗಿದ್ರು. ಕನ್ನಡ ಚಿತ್ರರಂಗದ ಅತ್ಯಂತ ಹಿರಿಯ ಜೀವಗಳಲ್ಲಿ ಅವರು ಒಬ್ಬರಾಗಿದ್ದರು ಆದರೆ ಈಗ ಅವರು ನಮ್ಮ ನಡುವೆ ಇಲ್ಲ. ಇವತ್ತು ಬೆಳಗ್ಗೆ ಕಾಫಿ ಕುಡಿದು ಮಲಗಿದ್ದ ದ್ವಾರಕೀಶ್ ರವರು ಮತ್ತೆ ಏಳಲೇ ಇಲ್ಲ ಅನ್ನೊದಾಗಿ ಅವರ ಮಗ ಹೇಳ್ತಾರೆ.
ನಿಜಕ್ಕೂ ಕೂಡ ಕನ್ನಡ ಚಿತ್ರರಂಗ ಅವರನ್ನು ಕಳೆದುಕೊಂಡು ಅನಾಥವಾಗಿದೆ. ಅವರಂತಹ ಸವ್ಯಸಾಚಿ ಪ್ರತಿಭೆ ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಹುಟ್ಟಿ ಬರಲಿ ಎಂಬುದಾಗಿ ಆಶಿಸೋಣ.